ಬೂತ್ ಕಾರ್ಯಕರ್ತರಿಗೆ ಶಕ್ತಿ ತುಂಬಿದರೆ ಗೆಲುವು ಸುಲಭ
ಸಾಗರ: ಬೂತ್ ಸಮಿತಿಯ ಕಾರ್ಯಕರ್ತರಿಗೆ ಶಕ್ತಿ ತುಂಬಿದರೆ ಚುನಾವಣೆಯಲ್ಲಿ ಗೆಲವು ಸುಲಭ ವಾಗುತ್ತದೆ. ತಳಮಟ್ಟದಲ್ಲಿ ನಡೆಸುವ ಕೆಲಸ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಉತ್ತರಾಖಂಡ್ನ ಬಿಜೆಪಿ ಮಾಜಿ ಶಾಸಕ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ರಾಕೇಶ್ ನೈನಿತಾಲ್ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ತಳಮಟ್ಟದಲ್ಲಿ ಕಾರ್ಯಕರ್ತರ ಶಕ್ತಿ ಹೊಂದಿರುವ ಏಕೈಕ ಪಕ್ಷ ಬಿಜಿಪಿ. ಅದು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಬೂತ್ ಮಟ್ಟದ ಕಾರ್ಯಕರ್ತರ ಮೂಲಕ ಜನರಿಗೆ ತಲುಪಿಸ ಬೇಕು. ಈ ಕೆಲಸ ಮಾಡಲು ಕಾರ್ಯಕರ್ತರಿಗೆ ಶಕ್ತಿ ಹಾಗೂ ಸರಿಯಾದ ಮಾರ್ಗ ದರ್ಶನ ಮಾಡಬೇಕು ಎಂದರು.
ಉತ್ತರಾಖಂಡ್ ಚುನಾವ ಣೆಯ ಉದಾಹರಣೆ ತಿಳಿಸುತ್ತಾ, ಕಳೆದ 30 ವರ್ಷಗಳಿಂದ ಉತ್ತರಾ ಖಾಂಡ್ನಲ್ಲಿ ಪ್ರತಿ ಚುನಾವಣೆಯಲ್ಲಿ ಒಂದೊಂದು ಪಕ್ಷ ಗೆಲ್ಲುತ್ತಿತ್ತು. ನಂತರ ನಾವು ಬೂತ್ ಸಮಿತಿಯ ಕಾರ್ಯ ಕರ್ತರಿಗೆ ಶಕ್ತಿ ತುಂಬಿ ಅವರ ಮೂಲಕ ಜನರನ್ನು ತಲುಪಲು ಆರಂಭ ಮಾಡಿದ ಮೇಲೇ ಅಲ್ಲಿನ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ ಎಂದರು.
ಬಿಜೆಪಿ ಸಾಗರ ಮಂಡಲದ ಅಧ್ಯಕ್ಷ ಗಣೇಶ್ ಪ್ರಸಾದ್, ಬೂತ್ ಉಸ್ತುವಾರಿ ಆರ್. ಓ. ಗೋಪಾಲ್, ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ, ನಗರಸಭಾ ಉಪಾಧ್ಯಕ್ಷ ವಿ.ಮಹೇಶ್ ಮತ್ತು ನಗರ ಬಿಜೆಪಿ ಮಾಜಿ ಅಧ್ಯಕ್ಷ ಆರ್. ಶ್ರೀನಿವಾಸ್ ಉಪಸ್ಥಿತರಿದ್ದರು.